ಸಂಜೆಯಲ್ಲಿ
ನಾನು
ಮಂದಗತ್ತಲೆಯಿದೆಯೆಂದೆ
ಅವಳು
ಮಂದ ಬೆಳಕಿದೆಯೆಂದಳು
ಎರಡೂ
ಸರಿಯಲ್ಲ
ಅಥವಾ
ಎರಡೂ ಸರಿ
ಅಥವಾ...
-ಕೆಂಚನೂರಿನವ
ಬಿಳಿ ಮುಗಿಲ ಬಾನಿನಲ್ಲಿ
ರವಿಯಂತೆ ನೀ
ಹೂ ಬಿರಿಯೆ ತಂಗಾಳಿ
ಘಮದಂತೆ ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ
ನಡು ಹಗಲ ದಾರಿಯಲ್ಲಿ
ತಣ್ಣೆಳಲು ನೀ
ಕಡು ದಾಹ ತಣಿಸುವಂತ
ತಣ್ಣೀರು ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ
ಇಳಿಸಂಜೆ ಬಾನಿನಲ್ಲಿ
ಕೆಂಪಂತೆ ನೀ
ಹೊಳೆದಂಡೆ ಬದಿಯಲ್ಲಿ
ತಂಪಂತೆ ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ
ಕಾರಿರುಳ ಕಾವಳದಿ
ಕಂದೀಲು ನೀ
ಸರಿರಾತ್ರಿ ಹೊಳೆವಂತ
ತಾರಕೆಯು ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ
-ಕೆಂಚನೂರಿನವ
...ನನ್ನ ಬದುಕಿನ ಅತ್ಯಂತ ನೋವಿನ ಸಮಯದಲ್ಲಿ ನಾನು ಬಯಸಿದ್ದು ಹಂಚಿಕೊಳ್ಳುವ ಹೆಗಲನ್ನಲ್ಲ ಬದಲಿಗೆ ಒಂದಿಷ್ಟು ಕತ್ತಲು ಮತ್ತು ಏಕಾಂತ ಅದು ಇಂತಹ ನಗರಗಳಲ್ಲಿ ಎಷ್ಟು ದುಬಾರಿಯೆಂಬುದು ಇಲ್ಲಿ ಬದುಕಿದವರಿಗಷ್ಟೇ ಗೊತ್ತು .
ನೀನು ಅಂದರೆ ಬೆಳಕು ಆದ್ದರಿಂದಲೇ ನಾನು ನಿನ್ನೆದುರು ಅಧೀರನಾಗುತ್ತಿದ್ದೆ
ಬೆಳಕು ನನಗೆ ಕೊಟ್ಟಿದ್ದು ಅಪಮಾನ ,ನಿಂದೆಗಳನ್ನೇ ಯಾರಾದರೂ ಬೆಳಕಿನ ಕುರಿತು ಮಾತಾಡಿದಾಗ ನಾನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ
ನನ್ನನ್ನು ಅಪಮಾನಿಸದೆ ಬಹಳಷ್ಟು ಹೊತ್ತು ಬೆಳಕಿನಲ್ಲಿ ಇರಿಸಿಕೊಂಡವಳು ನೀನು ಮಾತ್ರ
ನೀನು ತೊರೆದು ಹೋದಾಗ ನನಗೆ ಮತ್ತೆ ಖಾತರಿಯಾಯಿತು ಬೆಳಕೆಂಬುದು ಶಾಶ್ವತವಲ್ಲ ಅದು ಒಂದು ಕತ್ತಲಿನಿಂದ ಇನ್ನೊಂದು ಕತ್ತಲೆಯ ನಡುವಿನ ವಿರಾಮವಷ್ಟೆ.
ನಿನಗೂ ಗೊತ್ತು ಬೆಳಕನ್ನು ಸೃಷ್ಟಿಸಬೇಕು ಮತ್ತು ಅದನ್ನು ಕಾಪಾಡಿಕೊಳ್ಳಬೇಕು ಹಾಗೆ ಮಾಡಲು ಬಹಳಷ್ಟು ಶಕ್ತಿ ಇತ್ಯಾದಿ ಬೇಕು
ಅವುಗಳಿಲ್ಲದ ನಮ್ಮಂತವರಿಗೆ ಕತ್ತಲೇ ಸಾಥಿ
ಕತ್ತಲನ್ನು ನಾವು ಸೃಷ್ಟಿಸುವ ಮತ್ತು ಕಾಪಾಡಿಕೊಳ್ಳುವ ಅಗತ್ಯವಿಲ್ಲ
ಅದು ತಾನೇ ತಾನಾಗಿ ಸೃಷ್ಟಿಯಾಗುತ್ತದೆ ಅದಕ್ಕೆ ಯಾವುದೇ ಇಂಧನ ಇತ್ಯಾದಿ ಬೇಕಿಲ್ಲ
ಬೆಳಕಿನಲ್ಲಿ ಬದುಕಲು ಕೆಲವು ಅರ್ಹತೆ ಬೇಕು
ಕತ್ತಲಲ್ಲಿ ಹಾಗಿಲ್ಲ ಯಾರು ಬೇಕಾದರೂ ಬದುಕಬಹುದು ಕಣ್ಣಿದ್ದವರೂ ಕಣ್ಣಿಲ್ಲದವರೂ....
ಇಷ್ಟಾಗಿ ಕೂಡಾ ನಾನು ನಿನಗೆ ಆಭಾರಿ ಒಂದಿಷ್ಟು ದಿನ ಬೆಳಕಾಗಿದ್ದು ನಂತರ ಕತ್ತಲೆಯೇ ನಿತ್ಯಸತ್ಯವೆಂದು ತೋರಿದವಳು ನೀನು
-ಕೆಂಚನೂರಿನವ
ಕರುಣವಿರಲಿ ಗೆಳತಿ ನಿನ್ನ ಸೋಕಿದ
ತಂಗಾಳಿಯ ಇತ್ತ ಕಳಿಸುವಾಗ
ಇಲ್ಲಿರುವಾಗ ಒಬ್ಬಂಟಿಯಾಗಿ ನಾನು
ಭರಿಸಲಾರೆನು ಅದರ ತಂಪು
ಕರುಣವಿರಲಿ ಗೆಳತಿ ನೀನು ಮುಡಿದ
ಹೂವ ಗಂಧ ಇತ್ತ ಕಳಿಸುವಾಗ
ಇಲ್ಲಿರಲು ಒಬ್ಬಂಟಿಯಲ್ಲವೇನೆ ನಾನು
ಭರಿಸಲಾರೆನು ಅದರ ಘಮವ
ಕರುಣವಿರಲಿ ಗೆಳತಿ ನಿನ್ನ ಬಳೆಗಳು
ಹೊರಡಿಸಿದ ಸದ್ದು ಇತ್ತ ಕಳಿಸುವಾಗ
ನನ್ನ ಕಿವಿಗಳಿ ಭರಿಸಲಾರವು
ನಿನ್ನ ಜೊತೆಯಿಲ್ಲದ ಬರಿಯ ಸದ್ದನು
ಕರುಣವಿರಲಿ ಒಬ್ಬಳೇ ನಡೆವಾಗ
ಅಲ್ಲಿ ಏಳುವ ಹೂಕಂಪನಗಳು
ನನ್ನೆದೆಯ ತಲುಪಿದರೆ
ಒಬ್ಬನೇ ಭರಿಸಲಾರೆನು ಗೆಳತಿ
ಕರುಣವಿರಲಿ ಗೆಳತಿ ಸರಿರಾತ್ರಿಯಲಿ
ನೀನು ಮಗ್ಗಲು ಬದಲಿಸುವಾಗ
ಒಬ್ಬನೇ ಹೇಗೆ ಭರಿಸಲಿ ಹೇಳು
ಅದು ಕೊಡುವ ರೋಮಾಂಚನವ
-ಕೆಂಚನೂರಿನವ
ಹೀಗೆ ಸೆಳೆಯದಿರು ಬಯಕೆಗಳ
ನಿನ್ನ ನಗೆಯಲೆಗಳಲ್ಲಿ ತೇಲಿಬಿಟ್ಟು
ಬಂದಿದ್ದೇನೆ ನಡುಗಡಲಿನಲಿ
ನನ್ನ ಹಡಗನ್ನು ತೇಲಲುಬಿಟ್ಟು
ಹೊಳೆವ ಕಣ್ಣಲಿ ಹೀಗೆ ಸೆಳೆಯದಿರು
ಹೋಗಬೇಕಿದೆ ಹಡಗು ಬಹುದೂರ
ತಟವ ಸೇರದಿರಲಿ ಈ ಹಡಗು
ಸೆಳೆವ ನಿನ್ನ ಕಣ್ಣುಗಳ ಕಂಡು
ಹಾರಿಸಿ ಬಿಡದಿರು ನಿನ್ನ ಸೆರಗು
ಹಾಯಿಯಿಲ್ಲದ ಹಡಗು ನನ್ನದು
ಸೆಳೆಯದಿರು ತೇಲಿಬಂದರೆ ನಿನ್ನೆಡೆಗೆ
ನನ್ನ ದಾರಿಯಿದು ಬೇರೆಯಿದೆ
ಇಷಾರೆಗಳ ಮಾಡಿ ಕರೆಯದಿರು
ದಿಕ್ಕು ತಪ್ಪದಿರಲಿ ದಿಕ್ಕಿಲ್ಲದ ಹಡಗು
ನನ್ನ ದಾರಿಯಿದು ಬೇರೆಯಿದೆ
ದಿಕ್ಕು ತಪ್ಪಿದವನು ನಾನು
ದಡ ಸೇರಲೆಂದು ಕಡಲಿಗಿಳಿದಿಲ್ಲ
ತೇಲುವ ಬಲವೂ ಉಳಿದಿಲ್ಲ
ಮುಳುಗಿದರಿದು ಮುಳುಗಲಿ ಬಿಡು
ಸೆಳೆಯದಿರು,ನನ್ನ ದಾರಿಯಿದು ಬೇರೆ
-ಕೆಂಚನೂರಿನವ
ನಾನು ದ್ವೇಷಿಸುತ್ತೇನೆ
ನಿನ್ನ ಜೊತೆಯಿರದ ಸಂಜೆಯಲ್ಲಿ
ನನ್ನ ಸುತ್ತಲೂ ತಣ್ಣಗೆ ಸುಳಿವ
ತಂಗಾಳಿಯನ್ನು
ನಾನು ದ್ವೇಷಿಸಿತ್ತೇನೆ
ನೀನು ಜೊತೆಯಿರದ ಘಳಿಗೆಯಲ್ಲಿ ಮತ್ತೆ
ಮತ್ತೆ ಕಾಲಿಗೆ ಎಡತಾಕುವ
ಈ ಕಡಲ ಅಲೆಗಳನ್ನು
ನಾನು ದ್ವೇಷಿಸುತ್ತೇನೆ
ನೀನಿಲ್ಲದ ಸಮಯದಲ್ಲಿ
ನಿನ್ನ ಅಂಗೈಯ ಬಿಸುಪು ನೆನಪಿಸುವ
ಈ ಎಳೆಬಿಸಿಲನ್ನು
ನಾನು ದ್ವೇಷಿಸುತ್ತೇನೆ
ನಿನ್ನ ನೆನಪನ್ನು ಮತ್ತೆ ಮರಳಿಸುವ
ಸಂಜೆಯ ಕೆಂಪುಸೂರ್ಯ
-ಮತ್ತು ಕಡಲ ತೀರವನ್ನು
ನಾನು ದ್ವೇಷಿಸುತ್ತೇನೆ
ನೀ ನನ್ನ ಬಿಟ್ಟುಹೋದ ಮೇಲೂ
ನಿನ್ನನ್ನೇ ಎಡೆಬಿಡದೆ ಧೇನಿಸುವ
ನನ್ನದೇ ಹೃದಯವನ್ನು
-ಕೆಂಚನೂರಿನವ
ಮಧುಶಾಲೆ ಹಗಲಿರುಳು ತೆರೆದಿಟ್ಟಿರಬೇಕಾದ ಜಾಗ
ಮಧುಶಾಲೆ ಭಗ್ನ ಹೃದಯಗಳು ತಣಿಯುವ
ಜಾಗ
ಪ್ರೀತಿಯನು ಕೊಟ್ಟವರು ಕೊಟ್ಟ
ನೂರು ಬಗೆಯ ನೋವಿಗೆ
ಇದೊಂದೇ ಇಲಾಜು ಕೊಡುವ ಜಾಗ
ಸಿಹಿಯ ಮಾತಾಡಿ ಕಹಿಯುಣಿಸಿ ಹೋದವರ
ನೆನಪ
ಇಷ್ಟಿಷ್ಟೇ ಮರೆಸಿ
ನೆನಪಾಗಿಸುವುದು ಇದೊಂದೆ ಜಾಗ
ಜಗದ ನೋವನ್ನೆಲ್ಲ ತನ್ನ ಜೋಳಿಗೆಗೆ
ತುಂಬಿಕೊಂಡ ಫಕೀರ ನೋವ ತನ್ನ
ಮರೆಯಲಿರುವುದು ಇದೊಂದೇ ಜಾಗ
ತನ್ನೆದೆಯಲ್ಲಿ
ನೂರು ನೋವಿಟ್ಟುಕೊಂಡು
ನಮ್ಮ ನೋವಿನ ಆರೈಕೆ ಮಾಡುವ
ಸಾಕಿಯಿರುವ ಪವಿತ್ರ ಜಾಗ
-ಕೆಂಚನೂರಿನವ
http://inchara-shankara.blogspot.com
ಎಲ್ಲದಕೂ ಕತ್ತು ನೀಳ ಚಾಚಿ
ಇನ್ನೊಬ್ಬರತ್ತ ನೋಡುವ ನಾವು
ಸ್ವತಂತ್ರರಲ್ಲ
ನಮ್ಮ ನಾವು ನಿಭಾಯಿಸಿಕೊಳ್ಳಲಾಗದೆ
ನೂರು ಕಟ್ಟಳೆಗಳಿಗೊಳಗಾದ ನಾವು
ಸ್ವತಂತ್ರರಲ್ಲ
ಯಾರೋ ಕಂಡ ಕನಸಿಗೆ
ಹಗಲಿರುಳು ದುಡಿವ ನಾವು
ಸ್ವತಂತ್ರರಲ್ಲ
ಊರ ಕೋಟೆ ಯಪತಾಕೆ ಬದಲಿಸಿ
ಪಥ ಬದಲಿಸಲು ಮರೆತ ನಾವು
ಸ್ವತಂತ್ರರಲ್ಲ
ಕಟ್ಟಿದ್ದ ಹಗ್ಗವಿಲ್ಲವಾದರೂ
ಬೇಲಿಯೊಳಗೆ ಮೇಯುತ್ತಿರುವ ನಾವು
ಸ್ವತಂತ್ರರಲ್ಲ
ನಮ್ಮ ಸ್ವಾತಂತ್ರ್ಯ
ನಾವೇ ಘೋಷಿಸಿಕೊಳ್ಳಲಾಗದ
ನಾವು
ಸ್ವತಂತ್ರರಲ್ಲ
-ಕೆಂಚನೂರಿನವ
ನಶೆಯಲ್ಲಿ ಹೃದಯ ಜಾರೀತು ನಿನ್ನ ನೀ ಸಂಭಾಳಿಸು
ನಿಶೆಯಲ್ಲಿ ಹೆಜ್ಜೆ ಎಡವೀತು ನಿನ್ನ ನೀ ಸಂಭಾಳಿಸು
ಇಲ್ಲಿ ನೋವಿನಲ್ಲಳುವರ ಕಂಡು ನಗುವವರೇ ಹೆಚ್ಚು
ಕಣ್ಣೀರು ಕೆನ್ನೆಗಿಳಿಯುವ ಮೊದಲೇ ಸಂಭಾಳಿಸು
ಇಲ್ಲಿ ಮೋಸಕ್ಕೆ ಪ್ರೇಮದ ಹೆಸರಿಡುವವರೆ ಹೆಚ್ಚು
ಎದೆಯ ಮಾತು ತುಟಿಗೆ ಬರುವ ಮೊದಲೇ ಸಂಭಾಳಿಸು
ಇಲ್ಲಿ ಇರಿಯಲೆಂದೇ ತೆಕ್ಕೆ ಬೀಳುವವರು ಹೆಚ್ಚು
ತೋಳು ತೆರೆಯುವ ಮೊದಲೇ ನಿನ್ನ ನೀ ಸಂಭಾಳಿಸು
ಇದು ಹಾದಿ ತಪ್ಪಿದವನ ಹಾಡು ತಪ್ಪೇ ಹೆಚ್ಚು
ಲಯ ತಪ್ಪುವ ಮೊದಲೇ ನೀ ನನ್ನ ಸಂಭಾಳಿಸು
-ಕೆಂಚನೂರಿನವ
ಮಧುಶಾಲೆಯೇ ಸರಿಯಾದ ಜಾಗ
ವಿಷಾದದಲ್ಲೇ ಅದ್ದಿ ತೆಗೆದಂತಿರುವ
ಸಂಜೆಯನು ಕೊಲ್ಲಲು
ಮಧುಶಾಲೆಯೇ ಸರಿಯಾದ ಜಾಗ
ಎಡೆಬಿಡದೆ ಕಾಡುವ ನಿನ್ನ ನೆನಪುಗಳ
ಕೊಲ್ಲಲು
ಮಧುಶಾಲೆಯೇ ಸರಿಯಾದ ಜಾಗ
ನಿನ್ನ ನೆನಪಿನಂತೆಯೇ ಸುಡುವ
ಹಗಲನ್ನು ಕೊಲ್ಲಲು
ಮಧುಶಾಲೆಯೇ ಸರಿಯಾದ ಜಾಗ
ನೀನು ಬಿಟ್ಟುಹೋದ ಈ
ಹೃದಯವನ್ನು ಇಷ್ಟಿಷ್ಟೇ ಕೊಲ್ಲಲು
ಮಧುಶಾಲೆಯೇ ಸರಿಯಾದ ಜಾಗ
ನೀ ಮತ್ತೆ ಬರುವೆಯೆಂಬ ನಂಬಿಕೆಯ
ಕೊಲ್ಲಲು
-ಕೆಂಚನೂರಿನವ
ಬಾ ಗೆಳೆಯ ಇಲ್ಲೇ ಕೂರು ಜಗುಲಿಯ
ಮೇಲೆ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ
ನಿನಗೂ ನನಗೂ ಇಲ್ಲಿ ಒಂದೇ ರೀತಿಯ
ಮಧುಬಟ್ಟಲು
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ
ನನ್ನ ನೋವಿಗೂ ಮದ್ದಿದೆ ನಿನ್ನ
ನೋವಿಗೂ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ
ಎಲ್ಲರನ್ನೂ ಸಮಾನವಾಗಿ
ಪ್ರೀತಿಸುತ್ತಾಳಿಲ್ಲಿ ಸಾಕಿ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ
ಎಲ್ಲರೂ ಉನ್ಮತ್ತರೇ ಇಲ್ಲಿ
ನೀನೂ ಒಂದು ಕವಿತೆ ಬರೆ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ
-ಕೆಂಚನೂರಿನವ