ಈ ಮಹಲಿನ ಪತಾಕೆ
ನೂರು ಭಾರಿ ಬದಲಾಗಿದೆ
ಪ್ರತಿ ಭಾರಿ ಬದಲಾದಾಗಲೂ
ಲೆಕ್ಕವಿಲ್ಲದಷ್ಟು
ಮಹಿಳೆಯರು ವಿಧವೆಯರಾಗಿದ್ದಾರೆ
ಮಕ್ಕಳು ಅನಾಥರಾಗಿದ್ದಾರೆ
ಮತ್ತೆ ನೀವು ಹೇಳುತ್ತೀರಿ
ಮಧುಶಾಲೆಗಳನ್ನು ನಾಶಗೊಳಿಸಿ
ಎಂದು
-ಕೆಂಚನೂರಿನವ
ಕಾಡಿನಲ್ಲರಳಿದ ಹೂ ;
ನಾ ಬರೆದ ನೀ ಓದದ ನಿನ್ನ ಕವಿತೆ
*
ಇಲ್ಯಾರೋ ಹಚ್ಚಿದ ಹಣತೆ
ಅಲ್ಲೆಲ್ಲೋ ಒಸರುವ ಒರತೆ
ದಾರಿ ಸಾಗಿದೆ ಮುಗಿಯದೆ
ನೀನಿಲ್ಲವೆಂಬ ಕೊರತೆಯ ಹೊರತು
*
ನೀನು ದೇವತೆಯಂತವಳು ಅಂದಿದ್ದೇ ತಪ್ಪಾಯ್ತು;
ದೇವತೆ ಮನುಷ್ಯರಿಗೆ ಒಲಿಯದಂತೆ ಮಾಡುವ ಹುನ್ನಾರ ಇಂದಿನದಲ್ಲ ಬಿಡು
*
ನಿನ್ನ ಮನೆಗೆ ದಾರಿತೋರುವ ಕೈಮರ ಎಲ್ಲಿಯೂ ನೆಟ್ಟಿಲ್ಲವೆಂಬ ಸತ್ಯವೇ ಅದನ್ನು ಹುಡುಕಲು ನನಗಿರುವ ಪ್ರೇರಣೆ
*
ಎಲ್ಲ ಫಲಕಗಳನ್ನೂ ತಿರಸ್ಕರಿಸುತ್ತಾ ಮುಂದೆ ಸಾಗಿದೆ, ಈಗ ಆ ದಾರಿಯಲ್ಲಿ ನನ್ನ ಹೆಸರಿನಲ್ಲೊಂದು ಫಲಕ ನೆಡಲಾಗಿದೆಯಂತೆ
*
ನೀನು ಬದುಕಲ್ಲ,
ಬದುಕಿನ ಸುಂದರ ವ್ಯಾಖ್ಯಾನ
*
ಕಡಲಿಗಿಳಿಯಲು ಬಿಡದ
ಮಳೆ-ಗಾಳಿ
ದೋಣಿಯ ಸವತಿಯರು
-ಕೆಂಚನೂರಿನವ
ಮಹಾನಗರದ ಒಂದಿಷ್ಟು ಬಿಡಿ ಚಿತ್ರಗಳು -೨
ಇಲ್ಲಿ ಒಬ್ಬರಿಗೊಬ್ಬರ ಪರಿಚಯ ಅಗತ್ಯವಲ್ಲ
ಗುರುತಿನ ಪತ್ರಗಳು ಇರಲೇಬೇಕಾದ್ದು ಅಗತ್ಯ
ಇಲ್ಲಿ ಗಂಡ ಹೆಂಡತಿ ಒಂದೇ ಮನೆಯಲ್ಲಿ
ಬೇರೆ ಬೇರೆ ಸಮಯದಲ್ಲಿ ಬದುಕುತ್ತಾರೆ
ಇಲ್ಲಿ ಎಲ್ಲರಿಗೂ ಕನಸುಗಳಿರುತ್ತವೆ
ಆದರೆ ಯಾರೂ ನಿದ್ರಿಸುವುದಿಲ್ಲ
ಇಲ್ಲಿ ಮನೆಗಳಿಗೆ ದೊಡ್ಡ ಕಿಟಕಿಗಳಿದ್ದರೂ
ಅವು ತೆರೆದುಕೊಳ್ಳುವುದೇ ಇಲ್ಲ
ಇಲ್ಲಿ ಎಷ್ಟೊಂದು ಪಾದಗಳಿಗೆ
ಮಣ್ಣಿನ ಗುರುತು ಕೂಡ ಇಲ್ಲ
-ಕೆಂಚನೂರಿನವ
ಪ್ರೇಮ ಫಲಿಸಿದರೆ
ಮಧುಚಂದ್ರ ;
ಪ್ರೇಮ ವಿಫಲವಾದರೆ
ಮಧುಶಾಲೆ
*
ಮಧುಶಾಲೆಯಲ್ಲಿ ಕಾಲದ ಕಾಲು ಮುರಿದಿದೆ
ಇಲ್ಲಿ ಹಗಲು ರಾತ್ರಿಗಳು ಮಬ್ಬಿನಲ್ಲೇ ಕಾಲ ಕಳೆಯುತ್ತವೆ
*
ಊರಾಚೆಯೇ ಇರಲಿ ಬಿಡಿ ಮಧುಶಾಲೆ
ಪರಿತ್ಯಕ್ತರು ನಾವು ಊರಾಚಯೇ ಇದ್ದು ಬಿಡುತ್ತೇವೆ
ನಿಮ್ಮ ಪಾವಿತ್ರ್ಯದ ಸೂತ್ರ ನಮ್ಮ ಲೆಕ್ಕಕ್ಕೆ ಹೊಂದದು
ಲೆಕ್ಕಾಚಾರಗಳನ್ನು ಮೀರಿದವರು ನಾವು
ನೀವು ಹೇಳುವಂತೆ ಕುಡುಕರು ನಾವು
-ಕೆಂಚನೂರಿನವ
ಮಹಾನಗರಿಗಳಲ್ಲಿ
ಇಲ್ಲಿ ಏನನ್ನೂ ಬೆಳೆಯುವುದಿಲ್ಲ
ಆದರೂ ಎಲ್ಲವೂ ಸಿಗುತ್ತದೆ
ಹಣವಿರಬೇಕಷ್ಟೇ
ಇಲ್ಲಿನ ಶೃಂಗಾರಕ್ಕೆಂದೇ ಬೆಳೆಯಲಾಗುತ್ತೆ
ಹಳ್ಳಿಗಳಲ್ಲಿ ಬಣ್ಣ-ಬಣ್ಣದ ಹೂಗಳು
ಮೊದಲು ಹಸಿರು ಬೆಳೆಯುತ್ತಿದ್ದ ನೆಲದಲ್ಲಿ
ಈಗ ಎತ್ತರಕ್ಕೆ ನಗರಗಳು ಬೆಳೆಯುತ್ತಿವೆ
ಇಲ್ಲಿ ರಾತ್ರಿಯಾಗುತ್ತದೆಯಾದರು
ಕತ್ತಲಾಗುವುದಿಲ್ಲ
ತಿಂಗಳಬೆಳಕು ಬೀಳದ ಊರಿನಲ್ಲಿ
ಮೂನ್ ಲೈಟ್ ಡಿನ್ನರ್ ಬಡಿಸುವ ಹೋಟೆಲುಗಳಿವೆ
-ಕೆಂಚನೂರಿನವ
ಬಸ್ ಸ್ಟ್ಯಾಂಡಿನ ಕೆಲವು ಬಿಡಿ ಚಿತ್ರಗಳು
ನಿಲ್ದಾಣದಲ್ಲಿ ನಿಂತ ಕೊನೆಯ ಬಸ್ಸಿನ
ಕೆಳಗೆ
ಬೀದಿನಾಯಿಯ ಬೆಚ್ಚಗಿನ ನಿದ್ದೆ
ಇನ್ನೂ ಬಾರದ ಬಸ್ಸಿಗೆ
ಕಾಯುವವನೊಬ್ಬ
ಇನ್ನೂ ಹೊರಡದ ಬಸ್ಸಿಗೆ ಬಯ್ಯುವವ
ಮತ್ತೊಬ್ಬ
ಎಲ್ಲೆಲ್ಲೋ ಹೋಗುವವರಿಗೆಂದು ಕಟ್ಟಿದ
ನಿಲ್ದಾಣ
ಎಲ್ಲೂ ಹೋಗದ ಬಿಕ್ಷುಕಿಗೆ ಮನೆ
ಮೂರನೇ ಜಾವದಲ್ಲಿ ಹರಡಿ ಬಿದ್ದ ಕಸಕ್ಕೆ
ಬೀದಿ ಮಕ್ಕಳ ಕಚ್ಚಾಟ
ಎದ್ದೇಳಿ ಯುವಕರೇ ಅನ್ನುವ ಬೋರ್ಡಿನ
ಕೆಳಗೆ ಎಚ್ಚರವಾಗದಿರಲೆಂದು
ಕುಡಿದು ಮಲಗಿರುವ ಪೋಸ್ಟರ್
ಹಚ್ಚುವ ಹುಡುಗ
ಬಸ್ಸು ಹತ್ತುವ ಗಡಿಬಿಯಲ್ಲಿ
ಬಿದ್ದುಹೋದ
ಮಗುವಿನ ಒಂಟಿ ಚಪ್ಪಲಿ
-ಕೆಂಚನೂರಿನವ
ಪಾತ್ರದೊಳಗೇ ಹರಿವ ನೀರಿಗೆ
ಹೊಸದೇನೂ ಎದುರಾಗದು ,
ಅದೇ ದಾರಿ ಅದೇ ಪ್ರಪಾತ
ತನಗಿಂತ ಮೊದಲಿನವರು
ರಚಿಸಿದ ಕೊರಕಲು
ಪ್ರಯೋಜನವಿಲ್ಲ ಅಲ್ಲೇ ಹರಿದು
ದಿಕ್ಕುತಪ್ಪಿ ಹರಿಯಬೇಕು
ಹೊಸದಾರಿ ಹುಟ್ಟಿಸಲು
ಪ್ರವಾಹವಾಗಬೇಕು
ಆಗಲಷ್ಟೇ ಸಾಧ್ಯ
ಜಡ್ಡುಗಟ್ಟಿದ ಬಂಡೆ ಸರಿಸಲು
ಸಮುದ್ರ ಸೇರುವುದೇ
ಗುರಿಯೆಂದುಕೊಂಡರೆ
ಹೊಸದೇನೂ ಹುಟ್ಟದು
ಇಂಗಿದರೂ ಸರಿ ಅರ್ಧದಲಿ
ಹೊಸಹಾದಿಯ ಕನಸಲ್ಲಿ
ಮತ್ತೆ ಮುಂದುವರಿಸುವುದು
ಹಿಂಬಾಲಿಸಿ ಬರುವ ನೀರು
ಕಡಲೊಂದೇ ಗುರಿಯೆಂದುಕೊಂಡ
ನದಿಗಳೇ
ಒಮ್ಮೆ ಹರಿದು ನೋಡಿ ಪಾತ್ರದಾಚೆಗೂ
-ಕೆಂಚನೂರಿನವ
ನೆನಪಿದೆಯೇನೆ ಗೆಳತಿ ನಿನಗೆ ?
ನೆನಪಿದೆಯೇನೆ?
ಚಿಕ್ಕ-ಚಿಕ್ಕ ಗಲ್ಲಿಗಳಲ್ಲಿ
ದೊಡ್ಡ-ದೊಡ್ಡ ಕನಸುಗಳ
ಬೆವೆತ ಅಂಗೈಗಳ ನಡುವಿನಲ್ಲಿಟ್ಟುಕ
ೊಂಡು
ಓಡಾಡಿದ್ದು ನೆನಪಿದೆಯೇನೆ?
ಚಿಕ್ಕ-ಚಿಕ್ಕ ಖುಷಿಗೂ
ಕಣ್ಣು ಹನಿಯುವವರೆಗೂ
ದೊಡ್ಡದಾಗಿ ನಕ್ಕಿದ್ದು
ನೆನಪಿದೆಯೇನೆ?
ಬಂದ ಬಸ್ಸು ಬೇಕೆಂದೇ ಬಿಟ್ಟು
ನಿನ್ನ ಸಾಂಗತ್ಯಕ್ಕೆ ಹಂಬಲಿಸುತ್ತಾ
ಇನ್ನೊಂದು ಬಸ್ಸಿಗೆ ಕಾದಿದ್ದು
ನೆನನಪಿದೆಯೇನೆ ನಿನಗೆ ?
ಇಬ್ಬರೂ ಸೇರಿ ಕಟ್ಟಿದ
ಪಾರಿಜಾತದ ಮಾಲೆ,ನೀನು
ಇನ್ನೊಬ್ಬನ ಕೊರಳಿಗೆ ಹಾಕಿದ್ದು
ಸರಿಯೇನೆ ಗೆಳತಿ ಸರಿಯೇನೆ?
-ಕೆಂಚನೂರಿನವ
ಎಲ್ಲೂ ಹೋಗದ ರಸ್ತೆ
ಎಷ್ಟೋ ಜನರನ್ನು ಎಲ್ಲೆಲ್ಲೋ ಸೇರಿಸಿದೆ
*
ರಸ್ತೆಬದಿಯ ಮರದ ನೆರಳಿಗೆ ಮರುಳಾದರೆ;
ಮನೆಸೇರುವುದು ಕಷ್ಟ
*
ಕಾಲುದಾರಿ ಮಾಡು
ಮುಂದೆ ಹೆದ್ದಾರಿಯಾಗುತ್ತದೆ
*
ಮನೆ ತಲುಪಬೇಕೆ?
ಒಳ್ಳೆಯ ದಾರಿಯಲ್ಲಿ ಹೋಗು
*
ಹೊಸ ರಸ್ತೆಯುದ್ದಕ್ಕೂ ಹಳೆಯ ಹೆಜ್ಜೆಯ
ಅಸ್ಪಷ್ಟ ಗುರುತುಗಳು
*
�ಉಲ್ಲಾಸ ದಾರಿಯಲ್ಲಿದೆ;
ಕೆಟ್ಟದಾರಿ ತಲುಪಿಸಿದ ಗುರಿ
ಖುಷಿ ಕೊಡುವುದಿಲ್ಲ;
*
ಸುಮ್ಮನೇ ನಿಂತ ಕೈಕಂಬ;
ದಾರಿಹೋಕರಿಗೆ ದಿಕ್ಕುತೋರಿಸುತ್ತದೆ
*
ಗುರಿಯ ಖಾತರಿ
ಯಾರೂ ಕೊಡಲಾಗದು;
ಪಯಣವನ್ನ ಪ್ರೀತಿಸು ನಡೆದ
ಖುಷಿಯಾದರೂ ಜೊತೆಗಿರಲಿ
-ಕೆಂಚನೂರಿನವ
ಸಾಲು ಸಾಲು ಸಾಲುಗಳು
೧
ಎಲ್ಲವನ್ನು ಹೇಳಿಯೂ ಏನನ್ನೂ ಹೇಳದ
ನಿನ್ನ ಮಾತು ,ಏನೂ ಹೇಳದೆ
ಎಲ್ಲವನ್ನೂ ಹೇಳುವ ನಿನ್ನ ಕಣ್ಣು ;
ಎರಡೂ ನಿನ್ನದೇ ಎನ್ನುವುದು ನನ್ನ
ಪಾಲಿಗೆ ಅಚ್ಚರಿ !
೨
ಎಚ್ಚರದ ನಡಿಗೆ,ಕೊಡಮಾಡಲಿಲ್ಲ
ಇಷ್ಟೂ ಅಚ್ಚರಿ ;
ಎಚ್ಚರ
ತಪ್ಪಿದರಷ್ಟೇ ಅಚ್ಚರಿಗೀಡಾಗಬಹುದು೨
೩
ಬಟವಾಡೆಯಾಗದೆ ಉಳಿದುಹೋದ
ಒಂದು ಕಾಗದದಂತೆ;
ಪ್ರತಿಯೊಬ್ಬರಲ್ಲೂ
ಒಂದೊಂದು ಅವ್ಯಕ್ತ ಪ್ರೇಮ ಕಥ
೪
ಕೆಟ್ಟ ಕವನದಲ್ಲೊಂದೆರಡು ಒಳ್ಳೆಯ
ಸಾಲುಗಳು;
ನಿನ್ನ ಸಹವಾಸ ನನ್ನ ಕೆಟ್ಟ ಬದುಕಿನ
ಒಳ್ಳೆಯ ದಿನಗಳು
೫
ನಿನ್ನ ಪ್ರೀತಿಗೆ ಪ್ರಾಣ ಕೊಡಲಾರೆ;
ನಿನ್ನ ಪ್ರೀತಿಗೆ ಬದುಕು ಕೊಡಬಲ್ಲೆ
-ಕೆಂಚನೂರಿವ
ಯಾರೂ ಇಲ್ಲದ ಮನೆಯ
ಅರೆತೆರೆದ ಕಿಟಕಿಗಳು
ಸುಮ್ಮನೇ
ರಸ್ತೆ ದಿಟ್ಟಿಸುತ್ತವೆ
ಮೊನ್ನೆ ಮಂದಿರ
ಬೀಳದೇ ಹೋಗಿದ್ದು
ಅವನಿಗೆ ಬೇಸರ ತರಿಸಿತಂತೆ.
ಬಯಲಾಗುವ ಆಸೆಯವನಿಗೆ
ಜಗದ ಭ್ರಮೆ
ಕಳೆವ ಪಣ ತೊಟ್ಟು
ಹೊರಟ.
ಈಗವನಿಗೆ
ಭ್ರಮೆ ಕಳಚಿದೆಯಂತೆ
ತುಳುಕದಿರುವುದೆಲ್ಲವೂ
ತುಂಬಿರುವುದಿಲ್ಲ, ಒಮ್ಮೊಮ್ಮೆ
ಮಾಡಿನಿಂದ
ತೊಟ್ಟಿಕ್ಕುವ ಹನಿ
ಇರುಳ ನೀರವದಲ್ಲಿ
ಬಹಳ ದೊಡ್ಡಸದ್ದು
ಹಸಿದ ಹುಡುಗನಿಗೆ
ಅನ್ನದ ಪದ್ಯ ಹೇಳಿದೆ,
ಹಸಿವಿಂಗಲಿಲ್ಲವಂತೆ
-ಕೆಂಚನೂರಿನವ
ನಾಕು ಮುತ್ತು
ಒಂದೆರಡು ಅಪ್ಪುಗೆ
ಕಥೆ'ಬಯಸಿದರೆ' ಮಿಲನ
ನಿರ್ದೇಶಕನ ಬಯಕೆಗೆ
ನಿರ್ಮಾಪಕ ಅವಳಿಗೆ ಕಟ್ಟಿದ ಬೆಲೆ
ಹತ್ತು ಲಕ್ಷ
*
ಕತ್ತಲೆ ಕೋಣೆ
ಪರದೆ ಮೇಲೊಂದು ಚಿತ್ರ
ನೋಡಲು ಹೆಚ್ಚೆಂದರೆ ಐವತ್ತು
ವಿವಿಧ ಕೋನಗಳಲಿ ಸೆರೆಹಿಡಿದ
ಅವಳ ಬಾಗು-ಬಳುಕುಗಳು
ಒಳಗೆ ಹುಟ್ಟಿಸುವ ತುಮುಲಗಳು ಉಚಿತ
*
ಸಂಜೆ
ಜನತಾ ಬಾಜಾರಿನೆದುರು
ಸುಖ ಕೈ ಬೀಸಿ ಕರೆಯುತ್ತದೆ
ಹೆಚ್ಚೇನಿಲ್ಲ ಇನ್ನೂರೈವತ್ತು,
ರೂಮು ಬಾಡಿಗೆ
ಗಂಟೆಗೆ ನೂರು
*
ಇಲ್ಲ ಬಿಡಿ ನೀವು ಹುಡುಕುವ ಕಾವ್ಯ
ನನ್ನಲ್ಲಿಲ್ಲ ಕ್ಷಮಿಸಿ
-ಕೆಂಚನೂರಿನವ