ಬುಧವಾರ, ಜುಲೈ 10, 2013

ಯಾರೂ ಇಲ್ಲದ ಮನೆಯ
ಅರೆತೆರೆದ ಕಿಟಕಿಗಳು
ಸುಮ್ಮನೇ
ರಸ್ತೆ ದಿಟ್ಟಿಸುತ್ತವೆ

ಮೊನ್ನೆ ಮಂದಿರ
ಬೀಳದೇ ಹೋಗಿದ್ದು
ಅವನಿಗೆ ಬೇಸರ ತರಿಸಿತಂತೆ.
ಬಯಲಾಗುವ ಆಸೆಯವನಿಗೆ

ಜಗದ ಭ್ರಮೆ
ಕಳೆವ ಪಣ ತೊಟ್ಟು
ಹೊರಟ.
ಈಗವನಿಗೆ
ಭ್ರಮೆ ಕಳಚಿದೆಯಂತೆ

ತುಳುಕದಿರುವುದೆಲ್ಲವೂ
ತುಂಬಿರುವುದಿಲ್ಲ, ಒಮ್ಮೊಮ್ಮೆ

ಮಾಡಿನಿಂದ
ತೊಟ್ಟಿಕ್ಕುವ ಹನಿ
ಇರುಳ ನೀರವದಲ್ಲಿ
ಬಹಳ ದೊಡ್ಡಸದ್ದು

ಹಸಿದ ಹುಡುಗನಿಗೆ
ಅನ್ನದ ಪದ್ಯ ಹೇಳಿದೆ,
ಹಸಿವಿಂಗಲಿಲ್ಲವಂತೆ
-ಕೆಂಚನೂರಿನವ

1 ಕಾಮೆಂಟ್‌: